Slide
Slide
Slide
previous arrow
next arrow

ಕನ್ನಡಾಭಿಮಾನ ಮೂಡಿಸುವ ಕಸಾಪ ಕಾರ್ಯ ಶ್ಲಾಘನೀಯ: ದೇವಿದಾಸ ಮೊಗೇರ

300x250 AD

ಭಟ್ಕಳ: ವಿಶಿಷ್ಟ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡಾಭಿಮಾನ ಮೂಡಿಸುವ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ನುಡಿದರು.
ಅವರು ಅಳ್ವೆಕೋಡಿ ದುರ್ಗಾಪರಮೇಶ್ವರಿ ಪ್ರೌಢಶಾಲೆಯಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಕನ್ನಡ ನಾಡು- ನುಡಿಗೆ ಸಂಬಂಧಿಸಿದ ಥಟ್ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ ಸಾಹಿತ್ಯದ ಕುರಿತು ಆಸಕ್ತಿಯನ್ನು ಮೂಡಿಸುವ ಉದ್ದೇಶದಿಂದ ರಾಜ್ಯೋತ್ಸವದ ಮಾಸದಲ್ಲಿ ಪರಿಷತ್ತು ಆಯೊಜಿಸಿದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜ್ಞಾನಾರ್ಜನೆಯ ಜೊತೆಗೆ ಭಾಷಾಭಿಮಾನವನ್ನೂ ಬೆಳೆಸಿಕೊಳ್ಳಬೇಕು. ಒಂದು ಹಂತದವರೆಗೆ ಮಾತ್ರಭಾಷೆಯಲ್ಲಿಯೇ ಶಿಕ್ಷಣ ಪಡೆಯಬೇಕೆಂಬುದನ್ನು ರಾಷ್ಟ್ರೀಯ ಶಿಕ್ಷಣ ನೀತಿಯೂ ಪ್ರತಿಪಾದಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಸಂಸ್ಥಾಪಕ ಅಧ್ಯಕ್ಷ, ಮಾರಿಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮಾ ಮೊಗೇರ ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ಭಾಷೆಯ ಜೊತೆಗೆ ಇಂಗ್ಲೀಷ್ ಮತ್ತಿತರ ಭಾಷೆಯನ್ನೂ ಕಲಿಯಬೇಕು. ಹಾಗೆಯೇ ಕನ್ನಡತನವನ್ನು ಮಾತ್ರ ಎಂದಿಗೂ ಉಳಿಸಿಕೊಳ್ಳಬೇಕು. ಕನ್ನಡ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗುವಂತಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ಶಿಕ್ಷಣ ಸಂಸ್ಥೆಯಲ್ಲ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದೇ ನಮಗೆ ಸಂತೊಷದ ಸಂಗತಿ. ಕನ್ನಡದ ಕಾರ್ಯಕ್ರಮಕ್ಕೆ ನಮ್ಮ ಸಂಸ್ಥೆ, ಹಾಗೂ ಇಲ್ಲಿನ ಜಗನ್ಮಾತೆ ದುರ್ಗಾಪರಮೇಶ್ವರಿ ದೇವಾಲಯದ ಆಡಳಿತ ಮಂಡಳಿಯು ಸದಾ ಸಹಕರಿಸುತ್ತದೆ ಎಂದು ನುಡಿದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ವಿವಿಧ ಕಾರ್ಯಕ್ರಮಗಳ ಮೂಲಕ ಸಾಹಿತ್ಯಾಸಕ್ತಿ, ನಾಡಿನ ಪರಂಪರೆಯ ಘನತೆಯನ್ನು ಅರಿಯುವಂತೆ ಮಾಡುವುದು ಮುಖ್ಯ ಉದ್ಧೇಶ. ಕನ್ನಡದ ಕಾರ್ಯಕ್ಕೆ ಕೈಜೋಡಿಸಿದ ಪ್ರೌಢಶಾಲಾ ಆಡಳಿತ ಮಂಡಳಿ ಹಾಗೂ ಸದಾ ಬೆಂಬಲವಾಗಿ ನಿಲ್ಲುವ ದುರ್ಗಾಪರಮೇಶ್ವರಿ ದೇವಾಲಯದ ಆಡಳಿತ ಮಂಡಳಿಯ ಸಹಕಾರವನ್ನು ನೆನೆದರು. ಶಾಲಾ ಮುಖ್ಯಾಧ್ಯಾಪಕ ಕೆ.ಬಿ.ಮಡಿವಾಳ ಎಲ್ಲರನ್ನು ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಶಿಕ್ಷಕರಾದ ಅಶೋಕ ಟಿ.ನಾಯ್ಕ ನಿರ್ವಹಿಸಿದರೆ ಶಿಕ್ಷಕ ಡಿ.ಟಿ.ನಾಯ್ಕ ವಂದಿಸಿದರು. ಉದ್ಘಾಟನಾ ಕಾರ್ಯಕ್ರಮದ ನಂತರ ಶಿಕ್ಷಕ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಪೆಟ್ರಿಕ್ ಟೆಲ್ಲಿಸ್ ಪ್ರಾಜೆಕ್ಟರ ಬಳಸಿ ಹಲವು ಸುತ್ತುಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಕವಿಗಳು, ಪದಬಂಧ, ಗಾದೆ ಮಾತುಗಳು, ನುಡಿಗಟ್ಟು ಮುಂತಾದ ಹಲವು ವಿಷಯಗಳನ್ನ ಆಯ್ದುಕೊಂಡು ರಸಪ್ರಶ್ನೆ ನಡೆಸಿಕೊಟ್ಟರು. ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ಹನ್ನೆರಡು ತಂಡಗಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡವು.


ಸ್ಪರ್ಧಾ ವಿಜೇತರು
ಥಟ್ ಅಂತ ಹೇಳಿ ರಸಪ್ರಶ್ನೆ ಸ್ಪರ್ಧೆಯಲ್ಲಿ ತೆರ್ನಮಕ್ಕಿಯ ಕರ್ನಾಟಕ ಪಬ್ಲಿಕ್ ಶಾಲೆಯ ಹರ್ಷಿತಾ ನಾಯ್ಕ, ನಮಿತಾ ದೀಕ್ಷಿತ, ಹೇಮಾ ನಾಯ್ಕ ತಂಡ ಪ್ರಥಮ, ಬೈಲೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ಸಾಕ್ಷಿ ನಾಯ್ಕ, ಸಾಧನಾ ನಾಯ್ಕ, ಸಿಂಚನಾ ನಾಯ್ಕ ದ್ವಿತೀಯ ಹಾಗೂ ಜನತಾ ವಿದ್ಯಾಲಯ ಮುರ್ಡೇಶ್ವರದ ವಿದ್ಯಾರ್ಥಿಗಳಾದ ಮಹಾಲಕ್ಷ್ಮಿ ನಾಯ್ಕ, ನಮೃತಾ ಎ.ನಾಯ್ಕ, ಹೇಮಶ್ರೀ ಎಂ.ಮೊಗೇರ ಮತ್ತು ಶ್ರೀವಲಿ ಪ್ರೌಢಶಾಲೆಯ ಮೋನಿಕಾ ನಾಯ್ಕ, ಶಾರದಾ ದೇವಾಡಿಗ, ಪ್ರಥಮೇಶ ಬಲ್ಸೇಕರ ತೃತೀಯ ಬಹುಮಾನ ಪಡೆದರು. ವಿಜೇತರೊಂದಿಗೆ ಭಾಗವಹಿಸಿದ ಎಲ್ಲ ತಂಡಗಳಿಗೂ ಪ್ರಶಂಸನಾ ಪತ್ರ, ಕನ್ನಡದ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿಜೇತರಿಗೆ ದುರ್ಗಾಪರಮೇಶ್ವರಿ ದೇವಾಲಯದ ಆಡಳಿತ ಮಂಡಳಿಯು ರೂ.1000, ರೂ.750, ರೂ.500 ರೂ.ಗಳ ನಗದು ಬಹುಮಾನವನ್ನು ನೀಡಿ ಪ್ರೋತ್ಸಾಹಿಸಿತು.

300x250 AD
Share This
300x250 AD
300x250 AD
300x250 AD
Back to top